ಬುಧವಾರ, ನವೆಂಬರ್ 09, 2011

ಐಎಸ್ಐ ಬುಟ್ಟಿಯಲ್ಲಿ ಭಾರತೀಯ ಬುದ್ಧಿಜೀವಿಗಳು

ಭಾರತದ ಅನೇಕ ಸ್ವಘೋಷಿತ `ಮಾನವತಾವಾದಿ'ಗಳ ನಿಜಬಣ್ಣ ಬಯಲಾಗುತ್ತಿದೆ. ಇಂತಹ ಅನೇಕರು ಪಾಕಿಸ್ತಾನದ ಐಎಸ್ಐ ಗೆಸ್ಟ್ ಲಿಸ್ಟ್ನಲ್ಲಿ ವಿರಾಜಮಾನರಾಗಿರುವ ವಿಷಯ ಸುದ್ದಿಯಾಗುತ್ತಿದೆ. ಹೊಸ ಹೊಸ ಹೆಸರುಗಳು ಹೊರಬರುತ್ತಿವೆ. ಆದರೂ ನಮ್ಮ ಸರ್ಕಾರ ಎಚ್ಚೆತ್ತಿರುವ ಹಾಗೆ ಕಾಣುತ್ತಿಲ್ಲ.

ಐಎಸ್ಐ ಖರ್ಚಿನಲ್ಲಿ ವಿದೇಶ ಪ್ರವಾಸ, ಪಂಚತಾರಾ ಹೊಟೇಲಿನ ವಾಸ, ಸೆಮಿನಾರುಗಳಲ್ಲಿ ಭಾರತದ ವಿರುದ್ಧ ಅರಚಾಟ, ಭಾರತದ ಮತ್ತು ವಿದೇಶಗಳ ಪತ್ರಿಕೆಗಳಲ್ಲಿ ಪಾಕಿಸ್ತಾನದ ರಣತಾಂತ್ರಿಕ ನಿಲುವಿಗೆ ಅನುಕೂಲವಾಗುವಂತಹ ಲೇಖನಗಳನ್ನು ಬರಹ, ಹೇಳಿಕೆ ನೀಡಿಕೆ, ಜಿಹಾದಿಗಳ ಪರವಾಗಿ ವಾದಿಸುವುದು - ಇವೆಲ್ಲ ಈ `ಭಾರತೀಯ' ಐಎಸ್ಐ ಬುದ್ಧಿಜೀವಿಗಳ ಪಾಲಿನ ಕರ್ತವ್ಯ.

ಅಮೆರಿಕ, ಲಂಡನ್ ಹಾಗೂ ಬ್ರಸೆಲಗಳಲ್ಲಿ ನಡೆದ ಐಎಸ್ಐ ಸೆಮಿನಾರುಗಳಲ್ಲಿ ಭಾರತದ ಅನೇಕ ನಿವಾಸಿ, ಅನಿವಾಸಿ ಬುದ್ಧಿಜೀವಿಗಳು ಪಾಲ್ಗೊಂಡಿದ್ದು ಈಗಾಗಲೇ ಸುದ್ದಿಯಾಗಿದೆ. ಈ ಪೈಕಿ ಕುಪ್ರಸಿದ್ಧವಾದದ್ದು ಅಮೆರಿಕದ `ಕಾಶ್ಮೀರಿ ಅಮೆರಿಕನ್ ಕೌಂಸಿಲ್' (ಕೆಎಸಿ). ಅದರ ರೂವಾರಿ ಸಯ್ಯದ್ ಗುಲಾಮ್ ನಬಿ ಫೈ ಅಮೆರಿಕದಲ್ಲಿ ಪಾಕಿಸ್ತಾನದ ಪರ, ಭಾರತದ ವಿರುದ್ಧ ನಡೆಸುತ್ತಿದ್ದ ಐಷಾರಾಮಿ ಸೆಮಿನಾರುಗಳು ಬಹಳ ಬೇಗ ಅಮೆರಿಕದ FBI  ಗಮನವನ್ನು ಸೆಳೆದದ್ದು ಗಮನಿಸಬೇಕಾದ ಅಂಶ. ಆತ ವಾಸ್ತವವಾಗಿ ಐಎಸ್ಐ ಏಜೆಂಟ್ ಎಂಬುದನ್ನು FBI  ಬಹಳ ಬೇಗ ಬಯಲುಮಾಡಿತು. ಈಗ ಆತನ ಮೇಲೆ ಕ್ರಿಮಿನಲ್ ಆರೋಪವನ್ನು ಹೊರಿಸಲಾಗಿದೆ.

ಅಷ್ಟೇನೂ ಪ್ರಚಾರವಿಲ್ಲದ ಸಣ್ಣ ಸಂಸ್ಥೆಯಾದ ಕೆಎಸಿ, ತನ್ನ ಸೆಮಿನಾರುಗಳಿಗೆ ಲಕ್ಷಗಟ್ಟಲೆ ಹಣ ಖರ್ಚು  ಮಾಡುವ ಅಗತ್ಯವಾದರೂ ಏನಿತ್ತು? ಈ ಸೆಮಿನಾರುಗಳನ್ನು ಕೇಳಲು ಬರುತ್ತಿದ್ದವರು ಕೇವಲ ಬೆರಳೆಣಿಯಷ್ಟು ಮಂದಿ. ಮಾಧ್ಯಮಗಳಲ್ಲೂ ಈ ಸೆಮಿನಾರಿನ ಭಾಷಣಗಳು ವರದಿಯಾಗುತ್ತಿರಲಿಲ್ಲ. ಹೀಗಿರುವಾಗ ನಾಲ್ಕಾರು ಜನರ ಮುಂದೆ ಅರಚಾಡಲು ಬುದ್ಧಿಜೀವಿಗಳನ್ನು ವಿಮಾನದಲ್ಲಿ ಕರೆಸಿ, ಪಂಚತಾರಾ ಹೋಟೆಲುಗಳಲ್ಲಿ ಇರಿಸಿ, ಮೋಜು ಮಾಡಿಸುವ ಅಗತ್ಯವಾದರೂ ಏನಿತ್ತು? - ಇವೆಲ್ಲ ಎಫ್ಬಿಐ ತನಿಖಾ ವ್ಯಾಪ್ತಿಗೆ ಬಂದ ವಿಷಯಗಳು.

ಈಗ ಹೇಳಿ, ಇಂಹುದೊಂದು ತನಿಖೆಯನ್ನು ಭಾರತ ಸರ್ಕಾರ ಎಂದಾದರೂ ಮಾಡಿದೆಯೆ? ನಮ್ಮಲ್ಲಿಯೂ ಭಾರತವಿರೋಧಿ ಸೆಮಿನಾರುಗಳು, ಬರಹಗಳು ಸಮೃಧ್ಧವಾಗಿವೆ. ಅವುಗಳನ್ನು ಸದೆಬಡಿಯಲು ಸೂಕ್ತ ಕಾನೂನುಗಳು ಇವೆ. ಆದರೆ ಅವುಗಳನ್ನು ಸರಿಯಾದ ರೀತಿ ಬಳಸುತ್ತಿಲ್ಲ. ಜೊತೆಗೆ, ನಮ್ಮ ಕೆಲವು ಪ್ರಭಾವಶಾಲಿ ಮಾಧ್ಯಮಗಳು ಭಾರತವಿರೋಧಿ `ಮಾನವತವಾದಿ'ಗಳ ದನಿಗೇ ಇನ್ನಿಲ್ಲದ ಸ್ಥಳವನ್ನು ನೀಡುತ್ತಿವೆ. ಭಾರತದ ಸಂವಿಧಾನ, ಕಾನೂನುಗಳಿಗೆ ಅರುಂಧತಿ ರಾಯ್ ಪ್ರಭೇದಗಳು ಕವಡೆಯ ಬೆಲೆಯನ್ನೂ ನೀಡುವುದಿಲ್ಲ, `ಭಾರತ' ಎಂಬುದನ್ನೇ ಅವರು ಒಪ್ಪುವುದಿಲ್ಲ ಎಂಬುದು ಗೊತ್ತಿದ್ದರೂ ಅವರುಗಳಿಗೆ ಗೌರವಾನ್ವಿತ ಸ್ಥಾನವನ್ನು ನೀಡುವಲ್ಲಿ ನಾವು ಹಿಂದೆ ಬಿದ್ದಿಲ್ಲ.

ನಮ್ಮ ಅನೇಕ ಬುದ್ಧಿಜೀವಿಗಳು ಭಾರತದೊಳಗಿನ, ಪಾಕಿಸ್ತಾನ ಪ್ರಚೋದಿತ, ಕಾಶ್ಮೀರಿ ಪ್ರತ್ಯೇಕತಾವಾದದ ಪರವಾಗಿ ಹೇಳಿಕೆ ನೀಡುವುದು, ಲೇಖನಗಳನ್ನು ಬರೆಯುವುದು, ಸೆಮಿನಾರುಗಳಲ್ಲಿ ಮೈಮೇಲೆ ಬಂದವರಂತೆ ಮಾತನಾಡುವುದು ಹೊಸದೇನಲ್ಲ. ಮಾವೋವಾದಿಗಳ ಪರವಾಗಿ ವರ್ತಿಸುವುದು ರಹಸ್ಯವೇನಲ್ಲ. ಹಿಂದೆ ಸೋವಿಯತ್ ಗೂಢಚಾರ ಸಂಸ್ಥೆ ಕೆಜಿಬಿ ಪರವಾಗಿ ಭಾರತದಲ್ಲಿ ಅನೇಕ ಬುದ್ದೀಜೀವಿಗಳು, ಮುಖಂಡರು ಕೆಲಸ ಮಾಡುತ್ತಿದ್ದರು ಎಂಬುದನ್ನು `ಮಿತ್ರೋಕಿನ್ ಆಕ್ರೈವ್ಸ್' ಪುಸ್ತಕ ವಿವರವಾಗಿ ಬಯಲಿಗೆಳೆದಿತ್ತು. ಭಾರತದ ಅನೇಕರು ಕೆಜಿಬಿಯಿಂದ ಹಣ ಪಡೆಯುತ್ತಿದ್ದರು, ಭಾರತದ ಪ್ರಭಾವಶಾಲಿ ಪತ್ರಿಕೆಗಳಲ್ಲಿ ಕೆಜಿಬಿಯು ಸೋವಿಯತ್ ರಣನೀತಿಯ ಪರವಾದ ಸಾವಿರಾರು ಲೇಖನಗಳನ್ನು ಪ್ರಕಟ ಮಾಡಿಸಿತ್ತು ಎಂಬುದು ಸೋವಿಯತ್ ಪತನದ ನಂತರ ಬಯಲಾದ ರಹಸ್ಯ ದಾಖಲೆಗಳಿಂದ ತಿಳಿಯುತ್ತದೆ.

ಮೊದಲು ಕೆಜಿಬಿ, ಈಗ ಐಎಸ್ಐ. ಈಗ ಪಾಕಿಸ್ತಾನ ಮೂಲದಿಂದ ಯಾರು ಎಷ್ಟು ಹಣ ಪಡೆಯುತ್ತಿದ್ದಾರೆ ಎಂಬುದು ತಿಳಿದಿಲ್ಲ. ಒಟ್ಟಿನಲ್ಲಿ ವಿದೇಶಿ ಶಕ್ತಿಗಳು ಭಾರತದಲ್ಲಿ ಸಾರ್ವಜನಿಕ ಅಭಿಪ್ರಾಯ ರೂಪಿಸುವ ನಿಟ್ಟಿನಲ್ಲಿ ಕೆಲವು ಜನರನ್ನು, ಬುದ್ಧಿಜೀವಿಗಳನ್ನು, ಮಾಧ್ಯಮದವರನ್ನು ಹಾಗೂ ಮುಖಂಡರನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳುವ ಮಾತ್ರ ಮುಂದುವರಿದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನಗಳು ಮುಂದುವರಿಯುತ್ತಿವೆ. ಈ ಕುರಿತು ತನಿಖೆಯಾಗಬೇಕು.

ಭಾರತವಿರೋಧಿಗಳ ವಿರುದ್ಧ ಅಮೆರಿಕ ಕ್ರಮ ತೆಗೆದುಕೊಂಡರೂ ಭಾರತ ಸರ್ಕಾರವೇಕೆ ಸುಮ್ಮನಿದೆ? ಅಂಗನಾ ಚಟರ್ಜಿ  ಎಂಬ ಅನಿವಾಸಿ ಪ್ರೊಫೆಸರಳನ್ನು ಈಗ ಅಮೆರಿಕದಲ್ಲಿ ತನಿಖೆಗೆ ಒಳಪಡಿಸಲಾಗುತ್ತಿದೆ.  ಆದರೆ ಭಾರತದಲ್ಲಿ, ಬಿನಾಯಕ್ ಸೇನ್ ಪ್ರಕರಣದ ನಂತರ, `Unlawful Activities Prevention Act' ಅನ್ನೇ ಅಳಿಸಿಹಾಕಬೇಕು ಎಂಬ ಆಂದೋಲನವನ್ನು ಆರಂಭಿಸಲಾಗಿದೆ!

ಐಎಸ್ಐ ಬುದ್ಧಿಜೀವಿಗಳ ಪಡೆ ಭಾರತದಲ್ಲಿದೆ ಎಂಬ ಅನುಮಾನಗಳ ಹಿನ್ನೆಲೆಯಲ್ಲಿ ತನಿಖೆ ಅತ್ಯಗತ್ಯ. ಆದರೆ ಅದನ್ನು ಮಾಡುವವರು ಯಾರು?

2 ಕಾಮೆಂಟ್‌ಗಳು: