ಮಂಗಳವಾರ, ಆಗಸ್ಟ್ 03, 2010

ಚಂದಮಾಮಾದಿಂದ `ಕಿಂದರಿ ಜೋಗಿ'ವರೆಗೆ

(25-9-2009 ರಂದು ಕನರ್ಾಟಕ ಸಕರ್ಾರದ ಧಾರವಾಡ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ (ಡಯಟ್) ಆಯೋಜಿಸಿದ್ದ ವಿಚಾರಸಂಕಿರಣದಲ್ಲಿ ಮಾಡಿದ ಭಾಷಣ)


ಈ ವಿಷಯದ ಬಗ್ಗೆ ಮಾತನಾಡುವಾಗ ನಾನು `ಅಕ್ಯಾಡೆಮಿಕ್' ಆಗಿ ವಿಮಶರ್ೆ ಮಾಡುತ್ತಿಲ್ಲ. ಮಕ್ಕಳ ಪತ್ರಿಕೆ ತಯಾರಿಸುವ ಒಬ್ಬ ಸಂಪಾದಕನಾಗಿ ಪ್ರಾಯೋಗಿಕ ಅನುಭವದ ಹಿನ್ನೆಲೆಯಲ್ಲಿ ಈ ಕ್ಷೇತ್ರದ ವಿವಿಧ ಬೆಳವಣಿಗೆಗಳನ್ನು ಗುರುತಿಸುವ ಕೆಲಸವನ್ನು ಮಾಡುತ್ತಿದ್ದೇನೆ.

ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ಮಕ್ಕಳ ಪತ್ರಿಕೆಗಳು ಐತಿಹಾಸಿಕವಾಗಿ ಗಣನೀಯ ಪಾತ್ರವನ್ನು ವಹಿಸಿಕೊಂಡು ಬಂದಿವೆ. ಮೊದಮೊದಲು ನೀತಿ ಕಥೆಗಳನ್ನು ಹೇಳುವುದೇ ಮಕ್ಕಳ ಪತ್ರಿಕೋದ್ಯಮದ ಮೂಲ ಕಸುಬಾಗಿತ್ತು. ಈಗ ಜ್ಞಾನ ಸಂವಹನ ಹಾಗೂ ಮನೋರಂಜನೆಗಳು ಆ ಸ್ಥಳವನ್ನು ಆಕ್ರಮಿಸಿಕೊಂಡಿವೆ. ಕೀಳು ಮಟ್ಟದ ಮನೋರಂಜನೆಯೂ ಮಕ್ಕಳ ಸಾಹಿತ್ಯದ ಹೆಸರಿನಲ್ಲಿ ವಕ್ಕರಿಸಿದೆ. ಈಗ ಜಾಗತಿಕ ಮಟ್ಟದಲ್ಲಿ ಮಕ್ಕಳ ವ್ಯಕ್ತಿತ್ವಕ್ಕೆ ಹಾನಿ ಎಸಗುವ ಪತ್ರಿಕೆಗಳೂ ಹಲವಾರಿವೆ. ಈಗ ಕೆಲವು ಮಕ್ಕಳ ಕಾಮಿಕ್ಸ್ಗಳು ಪೋನರ್ೋಗ್ರಫಿಯ ಹಂತವನ್ನೂ ಮುಟ್ಟಿವೆ. ಕನ್ನಡದ ಮಟ್ಟಿಗೆ ಪರಿಸ್ಥಿತಿ ಅಷ್ಟು ಹದಗೆಟ್ಟಿಲ್ಲ.

ವಾಸ್ತವವಾಗಿ `ಮಕ್ಕಳ ಸಾಹಿತ್ಯ'ಕ್ಕೆ ಜನ್ಮ ನೀಡಿದ ದೇಶ ಭಾರತ. ಕ್ರಿಸ್ತಪೂರ್ವ 3ನೇ ಶತಮಾನದಲ್ಲಿ ರಚಿತವಾದ `ಪಂಚತಂತ್ರ' ಯುವ ಓದುಗರಿಗೆ ಜೀವನ ಶಿಕ್ಷಣ ನೀಡಲು ಬಹಳ ಉಪಯೋಗಕ್ಕೆ ಬಂದಿತು. ಅದು ಕಥೆಗಳ ಮೂಲಕ ವಯಸ್ಕರಿಗೂ ಮಾರ್ಗದರ್ಶನ ನೀಡುವ ಪ್ರಬುದ್ಧ ಗ್ರಂಥವೂ ಸಹ. ರಣನೀತಿ, ಯುದ್ಧನೀತಿ, ಸಂಧಿ ನೀತಿ ಇತ್ಯಾದಿಗಳನ್ನು ರಾಜರಿಗೆ ಬೋಧಿಸುವ ಗ್ರಂಥವೂ ಹೌದು. ಅನಂತರದ `ಜಾತಕ ಕಥೆಗಳು'; 12ನೇ ಶತಮಾನದ `ಹಿತೋಪದೇಶ' - ಇವೆಲ್ಲ ಮಕ್ಕಳಿಗೆ ಜೀವನ ಶಿಕ್ಷಣ ನೀಡಬಲ್ಲ ಕೆಲವು ಸಾಹಿತ್ಯಕೃತಿಗಳು.

ಪಶ್ಚಿಮದಲ್ಲಿ `ಮಕ್ಕಳ ಸಾಹಿತ್ಯ' ಎಂಬ ಪ್ರಕಾರ ಆರಂಭವಾಗಿದ್ದು 15ನೇ ಶತಮಾನದಲ್ಲಿ. ಆದರೆ ಮಕ್ಕಳಿಗಾಗಿ ಪತ್ರಿಕೆಗಳನ್ನು ಆರಂಭಿಸಿದ ಶ್ರೇಯ ಪಶ್ಚಿಮಕ್ಕೇ ಸಲ್ಲುತ್ತದೆ. ಮಕ್ಕಳಿಗಾಗಿ ಪ್ರಕಟವಾದ ಮೊದಲ ಇಂಗ್ಲಿಷ್ ನಿಯತಕಾಲಿಕ `ದಿ ಲಿಲಿಪುಟಿಯನ್ ಮ್ಯಾಗಜೀನ್'. 1751 ರಲ್ಲಿ ಆರಂಭವಾದ ಇದು ಒಂದು ವರ್ಷ ನಡೆಯಿತು. ಅನಂತರ 1788ರಲ್ಲಿ `ದಿ ಜುವೆನೈಲ್ ಮ್ಯಾಗಜೀನ್' ಹೊರಬಂತು. ಇದೂ ಸಹ ಒಂದು ವರ್ಷ ನಡೆಯಿತು. ಅದನ್ನೇ ಸ್ವಲ್ಪ ಮಾರ್ಪಡಿಸಿ, `ಚಿಲ್ಡ್ರನ್ಸ್ ಮ್ಯಾಗಜೀನ್' ಎಂಬ ಹೆಸರಿನಲ್ಲಿ, ಅಮೆರಿಕದಲ್ಲಿ ಮರು ಮುದ್ರಿಸಲಾಯಿತು.

*********

ಕನ್ನಡದ ವಿಷಯಕ್ಕೆ ಬಂದರೆ, 11ನೇ ಶತಮಾನದಲ್ಲೇ `ಪಂಚತಂತ್ರ'ವನ್ನು ದುರ್ಗಸಿಂಹ ಹಳೆಗನ್ನಡಕ್ಕೆ ತಂದಿದ್ದ. ಭಾರತದ ಪ್ರ್ರಾದೇಶಿಕ ಭಾಷೆಯೊಂದಕ್ಕೆ `ಪಂಚತಂತ್ರ'ದ ಮೊಟ್ಟಮೊದಲ ಅನುವಾದ ಅಥವಾ ರೂಪಾಂತರ ಇದು ಎನ್ನಲಾಗುತ್ತದೆ. 1865ರಲ್ಲಿ ಮೈಸೂರಿನ ಮಹಾರಾಜರಾದ ಮುಮ್ಮಡಿ ಕೃಷ್ಣರಾಜ ಒಡೆಯರ್ `ಪಂಚತಂತ್ರ'ವನ್ನು ಕನ್ನಡಕ್ಕೆ ಅನುವಾದಿಸಿದ್ದರು. 1836ರಲ್ಲಿ `ಹಿತೋಪದೇಶ' ಸಹ ಕನ್ನಡಕ್ಕೆ ಬಂದಿತು. ಎಸ್. ಜಿ. ನರಸಿಂಹಾಚಾರ್ ಅದನ್ನು ಕನ್ನಡದ ಮಕ್ಕಳಿಗಾಗಿ ಸರಳವಾದ ಭಾಷೆಯಲ್ಲಿ ಅನುವಾದಿಸಿದ್ದರು.

1840ರಲ್ಲಿ ವಾಲ್ಟರ್ ಎಲಿಯಟ್ ಎಂಬ ಬ್ರಿಟಿಷ್ ಅಧಿಕಾರಿ ಈಸೋಪನ ನೀತಿಕಥೆಗಳನ್ನು ಕನ್ನಡಕ್ಕೆ ಭಾಷಾಂತರ ಮಾಡಿಸಿ ಪಠ್ಯಪುಸ್ತಕವನ್ನಾಗಿ ಮಾಡಿದ್ದ. ಅದನ್ನು ಬಾಸೆಲ್ ಮಿಷನ್ ಪ್ರಕಟಿಸಿತ್ತು. ಈ ಅವಧಿಯಲ್ಲಿ ಅನೇಕ ನೀತಿ ಕಥೆಗಳು ಕನ್ನಡದಲ್ಲಿ ಪ್ರಕಟವಾದವು. ಆದರೆ ಅತಿ ಹೆಚ್ಚು ಪ್ರಭಾವಶಾಲಿಯಾದದ್ದು 1884ರಲ್ಲಿ ಎಂ. ಎಸ್. ಪುಟ್ಟಣ್ಣನವರು ತಿಳಿಯಾದ ಹೊಸಗನ್ನಡದಲ್ಲಿ ರಚಿಸಿದ `ನೀತಿ ಚಿಂತಾಮಣಿ'. 150 ನೀತಿ ಕಥೆಗಳ `ನೀತಿ ಚಿಂತಾಮಣಿ' ಈಗಲೂ ಅನನ್ಯವೆನಿಸಿದೆ.

ಈ ರೀತಿಯ ಕಥೆಗಳು ಕನ್ನಡ ಪತ್ರಿಕೆಗಳಲ್ಲಿ, `ಕರ್ಮವೀರ' ಮುಂತಾದ ಕನ್ನಡದ ಹಳೆಯ ನಿಯತಕಾಲಿಕಗಳಲ್ಲಿ ಪ್ರಕಟವಾಗುತ್ತಿದ್ದವು. ಆದರೆ ಇವುಗಳಿಗೊಂದು ಪರಿಣಾಮಕಾರಿ ಶಕ್ತಿಯನ್ನು ತಂದುಕೊಟ್ಟಿದ್ದು `ಚಂದಮಾಮಾ' ಮಾಸಪತ್ರಿಕೆ. ಇದು ಕನ್ನಡ ಮಕ್ಕಳ ಮೇಲೆ ಬಹಳ ಪ್ರಭಾವ ಬೀರಿತು. ಈಗ ಅಂತಹ ಹಲವು ನಿಯತಕಾಲಿಕಗಳಿವೆ.

ಈಗ ಕನ್ನಡನಾಡಲ್ಲಿ ತೀವ್ರವಾದ ಸಂಚಲನ ಹಾಗೂ ಪ್ರಭಾವ ಸೃಷ್ಟಿಸಿರುವ ಮಕ್ಕಳ ಪ್ರಕಟಣೆ ಎಂದರೆ, ನಾಡಿನ ಹಿರಿಯ ದಿನಪತ್ರಿಕೆ `ಸಂಯುಕ್ತ ಕನರ್ಾಟಕ' ಪ್ರತಿ ಶನಿವಾರ ಹೊರತರುತ್ತಿರುವ ವಿಶಿಷ್ಟ ಪುರವಣಿ `ಕಿಂದರಿ ಜೋಗಿ'. ಅದರದು ಅಭೂತಪೂರ್ವ ಪರಿಣಾಮ ಹೇಗೆ ಎಂದು ನಂತರ ಹೇಳುತ್ತೇನೆ. `ಕಿಂದರಿ ಜೋಗಿ'ಯ ಸಂಸ್ಥಾಪಕ ಸಂಪಾದಕನಾಗಿ ಅದರ ಹಿನ್ನೆಲೆ ಹಾಗೂ ಪ್ರಭಾವಗಳನ್ನು ದಾಖಲಿಸಬೇಕಾದ್ದು ನನ್ನ ಹೊಣೆ. ಅದಕ್ಕೂ ಮೊದಲು `ಚಂದಮಾಮಾ' ಕುರಿತು, ಅದರ ನಂತರದ ಕೆಲವು ನಿಯತಕಾಲಿಕಗಳನ್ನು ಕುರಿತು ಸ್ಥೂಲವಾಗಿ ನೋಡೋಣ.

`ಚಂದಮಾಮಾ' ಬಹಳ ದೀರ್ಘಕಾಲದಿಂದ ನಡೆದುಕೊಂಡು ಬರುತ್ತಿರುವ ಮಕ್ಕಳ ಮ್ಯಾಗಜೀನ್. ಈಗ ಅದು 13 ಭಾಷೆಗಳಲ್ಲಿ ಪ್ರಕಟವಾಗುತ್ತಿದೆ. ಅದರ 2 ಲಕ್ಷ ಪ್ರತಿಗಳು ಮಾರಾಟವಾಗುತ್ತಿವೆ ಎನ್ನಲಾಗಿದೆ. `ಸಂಥಾಲಿ' ಎಂಬ ವನವಾಸಿ ಜನರ ಭಾಷೆಯಲ್ಲೂ ಪ್ರಕಟವಾಗುತ್ತಿರುವುದು ಅದರ ವಿಶೇಷ.

1947ರ ಜುಲೈ ತಿಂಗಳಿನಲ್ಲಿ ತೆಲುಗು ಚಲನಚಿತ್ರ ನಿಮರ್ಾಪಕರಾದ ನಾಗಿರೆಡ್ಡಿ ಹಾಗೂ ಅವರ ಮಿತ್ರ ಚಕ್ರಪಾಣಿ ಎನ್ನುವವರು ಮಕ್ಕಳಿಗಾಗಿ ಆರಂಭಿಸಿದ ಈ ನಿಯತಕಾಲಿಕದ ಪ್ರಕಟಣೆ ಈಗಲೂ ಮುಂದುವರಿದಿದೆ. 1998ರಲ್ಲಿ ವಾವಹಾರಿಕ ವ್ಯಾಜ್ಯಕ್ಕೆ ಸಿಲುಕಿ ಅದರ ಪ್ರಕಟನೆ ಕೆಲಕಾಲ ಸ್ಥಗಿತಗೊಂಡಿತ್ತು. ನಂತರ ಹೊಸ ಸ್ವರೂಪದಲ್ಲಿ ಪ್ರಕಟಣೆಯನ್ನು ಮುಂದುವರಿಸಲಾಯಿತು. 2007ರಿಂದ ಜಿಯೋಡೇಸಿಕ್ ಎಂಬ ಹೊಸ ಕಂಪೆನಿಯ ಒಡೆತನದಲ್ಲಿ ಅದನ್ನು ಹೊರತರಲಾಗುತ್ತಿದೆ. ಈಗಲೂ ಕನ್ನಡದಲ್ಲಿ ಪ್ರಕಟವಾಗುತ್ತಿರುವ ಅತ್ಯಂತ ಹಳೆಯ ಮಕ್ಕಳ ಪತ್ರಿಕೆ `ಚಂದಮಾಮಾ' ಎಂಬುದು ನನ್ನ ಭಾವನೆ.

ದೇಶ ಸ್ವಾತಂತ್ರ್ಯ ಗಳಿಸಿದ ಸಮಯದಲ್ಲಿ ಮಕ್ಕಳಿಗೆ ಭಾರತೀಯ ಪೌರಾಣಿಕ, ಜಾನಪದ ಸಾಹಿತ್ಯವನ್ನು, ನೀತಿ ಕಥೆಗಳನ್ನು ಪರಿಚಯಿಸುವ ಕೆಲಸವನ್ನು `ಚಂದಮಾಮಾ' ಅದ್ಭುತವಾಗಿ ಮಾಡಿತು. ಈಗ ವಿಜ್ಞಾನ, ತಂತ್ರಜ್ಞಾನ - ಹೀಗೆ ಹೊಸ ಅಗತ್ಯಗಳ ಅನುಸಾರ ಜ್ಞಾನಾಧಾರಿತ ವಾಚನಾ ಸಾಮಗ್ರಿಗಳನ್ನೂ ಒಂದಿಷ್ಟು ಸೇರಿಸಿ ಅದನ್ನು ವೈವಿಧ್ಯಮಯವಾಗಿಸುವ ಯತ್ನ ನಡೆದಿದೆ.

`ಚಂದಮಾಮಾ'ದ ಬೆನ್ನಲ್ಲೇ 1949ರಲ್ಲಿ ಪ್ರಕಟಣೆ ಆರಂಭಿಸಿದ ಇನ್ನೊಂದು ಬಹುಭಾಷಾ ನಿಯತಕಾಲಿಕ ಎಂದರೆ `ಬಾಲಮಿತ್ರ'. ವಾಸ್ತವವಾಗಿ 1941ರಲ್ಲೇ `ಬಾಲ ಕೇಸರಿ' ಎಂಬ ತೆಲುಗು ಪತ್ರಿಕೆ ಹೆಸರಾಗಿತ್ತು. ತೆಲುಗು ಶಾಲಾ ಶಿಕ್ಷಕರೊಬ್ಬರು ಅದನ್ನು ಆರಂಭಿಸಿದ್ದರು. ಅನಂತರ 1945ರಲ್ಲಿ  `ಬಾಲ' ಎಂಬ ಪತ್ರಿಕೆ ಹೊರಬಂತು. ಆದರೆ ಅವೆಲ್ಲ `ಚಂದಮಾಮಾ'ದ ಪ್ರಭಾವದ ಮುಂದೆ ಮಸುಕಾದವು. 1949ರಲ್ಲಿ `ಬಾಲಮಿತ್ರ' ಹೊರಬಂದಿತು. ಅದೂ ಸಹ ಮೊದಲು ತೆಲುಗು ಅವತರಣಿಕೆಯ ಮೂಲಕ ಹೊರಬಂದು ಅನಂತರ ಇತರ ಕೆಲವು ಭಾರತೀಯ ಭಾಷೆಗಳಲ್ಲಿ ಪ್ರಕಟವಾಗತೊಡಗಿತು. ಸ್ವರೂಪದಲ್ಲಿನ `ಚಂದಮಾಮಾ'ವನ್ನೇ `ಬಾಲಮಿತ್ರ' ಅನುಕರಿಸಿದ್ದರಿಂದ ಮಕ್ಕಳಿಗೆ ಕಥಾ ಸಾಮಗ್ರಿ ಹೇರಳವಾಗಿ ದೊರೆಯಿತು.

********

1920-30ರ ದಶಕದಲ್ಲಿ ಕಾಮಿಕ್ಸ್ ಪ್ರಕಾರ ಅಮೆರಿಕದಲ್ಲಿ ಜನಪ್ರಿಯವಾಗತೊಡಗಿತು. ಎಲ್ಲ ಪ್ರಮುಖ ದಿನ ಪತ್ರಿಕೆಗಳು ಕಾಮಿಕ್ ಸ್ಟ್ರಿಪ್ಗಳನ್ನು ಪ್ರಕಟಿಸತೊಡಗಿದವು. ಮುದ್ರಣ ಮಾಧ್ಯಮದಲ್ಲಿ ದೃಶ್ಯ ಮಾಧ್ಯಮದಷ್ಟು ತೀವ್ರವಾದ ಪರಿಣಾಮ ಉಂಟುಮಾಡುವ ಶಕ್ತಿ ಇರುವ ವಿಶಿಷ್ಟ ಪ್ರಕಾರವಾಗಿ ಅದು ಬೆಳೆಯುತ್ತ ಬಂದಿತು. ಸೂಪರ್ಮ್ಯಾನ್, ಫ್ಯಾಂಟಮ್ - ಹೀಗೆ ತಾರಾವರ್ಚಸ್ಸಿನ ಕಾಮಿಕ್ ಹೀರೋ ಪಾತ್ರಗಳು ಸೃಷ್ಟಿಯಾದವು.

ಈಗ ಕಾಮಿಕ್ ಪ್ರಕಾರ ಎಲ್ಲ ರಂಗಗಳಲ್ಲೂ ಬಳಸಲ್ಪಡುತ್ತಿದೆ. ಜಾಹಿರಾತು ಮುಂತಾದ ವಾಣಿಜ್ಯಿಕ ಉದ್ದೇಶಗಳಿಂದ ಹಿಡಿದು ಅಶ್ಲೀಲ ಸಾಹಿತ್ಯಕ್ಕೂ ಅದು ಶಕ್ತಿ ಒದಗಿಸುತ್ತಿದೆ. ಹೀಗಿರುವಾಗ ನಮ್ಮ ಶಿಕ್ಷಣ ಇಲಾಖೆ ಹಿಮದೆ ಬೀಳದೇ ಕಾಮಿಕ್ಸ್ ಪ್ರಕಾರವನ್ನು ಬಳಸಿಕೊಳ್ಳುವುದು ಸೂಕ್ತ. ಅದು ಹೊಂದಿರುವ ಅಪರಿಮಿತ ಶಕ್ತಿಯನ್ನು ನಮ್ಮ ಮಕ್ಕಳ ಶಿಕ್ಷಣಕ್ಕೆ ಬಳಸಿಕೊಂಡರೆ ಕಲಿಕೆ ಹೆಚ್ಚು ಆಕರ್ಷಕ ಹಾಗೂ ಸುಲಭವಾಗುತ್ತದೆ ಎಂಬುದು ನನ್ನ ಸಲಹೆ. ಪ್ರಾಥಮಿಕ ಹಾಗೂ ಮಾಧ್ಯಮಿಕ ಹಂತಗಳಲ್ಲಿ ಅನೇಕ ವಿಷಯಗಳ ಪಠ್ಯಪುಸ್ತಕಗಳನ್ನು ಕಾಮಿಕ್ಸ್ ರೂಪದಲ್ಲಿ ಹೊರತರುವುದು ಬಹಳ ಪ್ರಯೋಜನಕಾರಿಯಾಗುತ್ತದೆ.

ಕಾಮಿಕ್ಸ್ ಪತ್ರಿಕೆಗಳ ವಿಷಯಕ್ಕೆ ಬರೋಣ. ಭಾರತೀಯ ಸಾಹಿತ್ಯದ ಶ್ರೇಷ್ಠ ಕಥೆಗಳನ್ನು, ಇತಿಹಾಸಗಳನ್ನು ಕಾಮಿಕ್ ರೂಪದಲ್ಲಿ ಹೊರತರಬಹುದು ಎನ್ನುವ ಆಸೆ ಹಲವರಲ್ಲಿ ಇದ್ದಿರಬಹುದು. ಆದರೆ ಇದು ಹಲವು ದಶಕಗಳ ಕಾಲ ಕಾರ್ಯಗತವಾಗಿರಲೇ ಇಲ್ಲ. ಈ ವಿಶಿಷ್ಟ ಪ್ರಯೋಗ ಮಾಡಿದ್ದು `ಅಮರ ಚಿತ್ರಕಥೆ'. 1967ರಿಂದ ಈವರೆಗೆ 400ಕ್ಕೂ ಹೆಚ್ಚು ಶೀಷರ್ಿಕೆಗಳನ್ನು ಅದು ಹೊರತಂದಿದೆ. ಎರಡು-ಮೂರು ತಲೆಮಾರಿನ ಮಕ್ಕಳು ಅದರ ಶುದ್ಧ ಸಾಹಿತ್ಯದಿಂದ ಪ್ರಭಾವಿತರಾಗಿದ್ದಾರೆ. ಈವರೆಗೆ `ಅಮರ ಚಿತ್ರ ಕಥೆ'ಯ 9 ಕೋಟಿಗೂ ಹೆಚ್ಚು ಪ್ರತಿಗಳು ಮಾರಾಟವಾಗಿ ದಾಖಲೆ ಸೃಷ್ಟಿಯಾಗಿದೆ.

ಪ್ರಭಾವದ ದೃಷ್ಟಿಯಿಂದ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ದೃಷ್ಟಿಯಿಂದ ನೋಡಿದಾಗ, `ಅಮರ ಚಿತ್ರಕಥೆ' ಅತ್ಯಂತ ತೀವ್ರವಾದ ಪರಿಣಾಮ ಉಂಟು ಮಾಡುತ್ತಿರುವ ಪ್ರಕಟಣೆ ಎನಿಸುತ್ತದೆ. ಕಾಮಿಕ್ಸ್ ಸ್ವರೂಪದಲ್ಲಿ ಕನ್ನಡವನ್ನೂ ಒಳಗೊಂಡಂತೆ 20 ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ, ನಿಯತಕಾಲಿಕದಂತೆಯೇ `ಅಮರ ಚಿತ್ರಕಥೆ' ಕಾಮಿಕ್ಸ್ ಸರಣಿ ಪ್ರಕಟವಾಗುತ್ತಿದೆ. `ಕಾಮಿಕ್ಸ್' ಪದಕ್ಕೆ `ಚಿತ್ರಕಥೆ' ಎಂಬ ಸುಂದರ ಹೆಸರನ್ನು ಜನಪ್ರಿಯಗೊಳಿಸಿದ್ದೂ ಅದೇ.

`ಅಮರ ಚಿತ್ರಕಥೆ'ಯ ಪ್ರಕಟಣೆಯಾದ `ಟಿಂಕಲ್' ಈಗ ಅತಿ ಹೆಚ್ಚು ಓದುಗರನ್ನು ಹೊಂದಿರುವ ಭಾರತೀಯ ಮಕ್ಕಳ ಪತ್ರಿಕೆ ಎನ್ನಲಾಗುತ್ತದೆ. ಈ ನಿಯತಕಾಲಿಕ ಸುಮಾರು 12 ಲಕ್ಷ ಓದುಗರನ್ನು ಪಡೆದಿದೆ ಎಂದು ಅಂದಾಜಿಸಲಾಗಿದೆ. ಈ ರೀತಿಯ ಮಾರುಕಟ್ಟೆ ಸದ್ಯಕ್ಕೆ ಕನ್ನಡದ ಯಾವ ಮಕ್ಕಳ ಪತ್ರಿಕೆಗೂ ಇಲ್ಲ. ಆದರೆ ದೊಡ್ಡ ದಿನಪತ್ರಿಕೆಗಳ ಮಕ್ಕಳ ಪುರವಣಿಗಳು ಈ ರೀತಿಯ ಕೊರಗನ್ನು ನಿವಾರಿಸಬಲ್ಲವು. `ಕಿಂದರಿ ಜೋಗಿ' ಅಂತಹ ಅದ್ಭುತ ಕ್ರಾಂತಿ ಮಾಡಿದೆ.

*********

ಯಾವ ಕನ್ನಡ ಪತ್ರಿಕೆಯೂ ನೀಡದಷ್ಟು ಪ್ರಾಮುಖ್ಯತೆಯನ್ನು `ಸಂಯುಕ್ತ ಕನರ್ಾಟಕ' ಮುಂದಿನ ತಲೆಮಾರಿಗೆ ನೀಡಿದೆ. ಸುಮಾರು ಎರಡೂವರೆ ವರ್ಷಗಳ ಹಿಂದೆ ಪತ್ರಿಕೆ 74 ವರ್ಷಗಳನ್ನು ಪೂರೈಸಿ 75ನೇ ವರ್ಷಕ್ಕೆ ಕಾಲಿಟ್ಟಾಗ ಹಾಕಿಕೊಂಡ ವಿಶಿಷ್ಟ ಯೋಜನೆ `ಕಿಂದರಿ ಜೋಗಿ'ಯ ಪ್ರಕಟಣೆ. ನೈತಿಕ ಶಿಕ್ಷಣ ಹಾಗೂ ಮೌಲ್ಯಯುತ ಸಂಸ್ಕಾರದ ಜೊತೆಗೆ, ವಿಜ್ಞಾನ, ತಂತ್ರಜ್ಞಾನ, ಇತಿಹಾಸ, ಜಾಗತಿಕ ವಿಷಯಗಳು, ಸಾಮಾನ್ಯ ಜ್ಞಾನ - ಹೀಗೆ ಜ್ಞಾನಧಾರಿತ, ಮಾಹಿತಿಪೂರ್ಣ ಪುರವಣಿಯಾಗಿ ಅದನ್ನು ರೂಪುಗೊಳಿಸಿದ್ದೇವೆ. ಇಷ್ಟು ವೈವಿಧ್ಯಮಯ ವಿಷಯಗಳು ಒಂದೇ ಪತ್ರಿಕೆಯಲ್ಲಿ ಸಿಗುವುದು ಕಷ್ಟ.

ದಿನಪತ್ರಿಕೆಗಳು ನ್ಯೂಸ್ಪ್ರಿಂಟ್ ಕಾಗದವನ್ನು ಬಳಸುವುದು ವಾಣಿಜ್ಯಿಕ ದೃಷ್ಟಿಯಿಂದ ಅನಿವಾರ್ಯ.  ಹೀಗಾಗಿ ಕಾಗದವೊಂದನ್ನು ಬಿಟ್ಟು ಉಳಿದೆಲ್ಲವೂ - ಅಂದರೆ,  ಮಾಹಿತಿ, ವಿನ್ಯಾಸ, ಶೈಲಿ - ಎಲ್ಲವೂ ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿರುವಂತೆ ನೋಡಿಕೊಳ್ಳುತ್ತಿದ್ದೇವೆ.

ಅತ್ಯಂತ ಕಡಿಮೆ ಬೆಲೆಗೆ ಜ್ಞಾನಾಧಾರಿತ ಮಾಹಿತಿಯನ್ನು `ಕಿಂದರಿ ಜೋಗಿ' ಒದಗಿಸುತ್ತಿದೆ. ಅದರಲ್ಲಿ ಜಾಹೀರಾತು ಹಾಕುತ್ತಿಲ್ಲ. ಇದರಿಂದ ಆಥರ್ಿಕವಾಗಿ ಕಷ್ಟವಾಗುತ್ತದೆ. ಆದರೂ ಮಕ್ಕಳಿಗೆ ಪ್ರತಿ ಶನಿವಾರ `ಸಂಯುಕ್ತ ಕನರ್ಾಟಕ'ವನ್ನು ಅದರ ಮುಖಬೆಲೆಗಿಂತಲೂ ಬಹಳ ಕಡಿಮೆ ದರದಲ್ಲಿ ನೀಡಲಾಗುತ್ತಿದೆ. ಅಷ್ಟು ಮಾತ್ರವಲ್ಲ, ವಿವಿಧ ಸಂಸ್ಥೆಗಳ ನೆರವಿನಿಂದ ಬಡ ಮಕ್ಕಳಿಗೆ ಉಚಿತವಾಗಿಯೂ `ಕಿಂದರಿ ಜೋಗಿ'ಯನ್ನು ವಿತರಿಸಲಾಗುತ್ತಿದೆ. ಹೀಗೆ ಧನಲಾಭದ ಅಪೇಕ್ಷೆ ಇಲ್ಲದೇ ಮಕ್ಕಳ ಪುರವಣಿಗಳನ್ನು ಹೊರತರುತ್ತಿರುವ ದಿನಪತ್ರಿಕೆಗಳು ಜಗತ್ತಿನಲ್ಲೇ ಬಹಳ ಕಡಿಮೆ ಎಂದರೆ ಅತಿಶಯೋಕ್ತಿಯಾಗಲಾರದು ಎಂದು ಭಾವಿಸಿದ್ದೇನೆ. ಇಂತಹ ಪ್ರಯೋಗ ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿ ಈವರೆಗೆ ಎಂದೂ ಆಗಿರಲಿಲ್ಲ.

ಈಗ `ಕಿಂದರಿ ಜೋಗಿ'ಯನ್ನು ನಾಡಿನ ಸಾವಿರಾರು ಶಾಲೆಗಳು ಪಠ್ಯಪುಸ್ತಕಗಳಿಗೆ ಪೂರಕವಾದ ಸಾಹಿತ್ಯದ ರೀತಿ ಸ್ವಾಗತಿಸಿ ಸ್ವೀಕರಿಸಿವೆ. ಲಕ್ಷಾಂತರ ಮಕ್ಕಳು ಅದರ ಲಾಭ ಪಡೆಯುತ್ತಿದ್ದಾರೆ. ಅದರಿಂದಾಗಿ ಅವರ ತಿಳಿವಳಿಕೆಯ ಮಟ್ಟ ಉತ್ತಮಗೊಂಡಿದೆ ಹಾಗೂ ಅಧ್ಯಯನ ಸಾಮಥ್ರ್ಯ ಬಹಳ ಸುಧಾರಿಸಿದೆ ಎಂದು ಮೆಚ್ಚುಗೆಯ ಪತ್ರಗಳು ನಮಗೆ ಬರುತ್ತಿವೆ. ವಯಸ್ಕರೂ ಸಹ `ಕಿಂದರಿ ಜೋಗಿ'ಯನ್ನು ಆಸಕ್ತಿಯಿಂದ ಓದುತ್ತಿದ್ದಾರೆ. ಅದರ ಪ್ರಸಾರ ಸಂಖ್ಯೆ ಏರುಗತಿಯಲ್ಲಿದೆ. ಮಕ್ಕಳಲ್ಲಿ ನಾವು ಓದುವ, ಅದರಲ್ಲೂ ಮಕ್ಕಳಲ್ಲಿ ಕನ್ನಡವನ್ನು ಓದುವ ಅಭ್ಯಾಸ, ರುಚಿ `ಕಿಂದರಿ ಜೋಗಿ'ಯಿಂದಾಗಿ ಹೆಚ್ಚಾಗಿದೆ. ಇದು ಕನ್ನಡದ ಮಟ್ಟಿಗೆ ಒಳ್ಳೆಯ, ಅಭೂತಪೂರ್ವ ಬೆಳವಣಿಗೆ.

ಅನೇಕ ರೀಡರ್ಶಿಪ್ ಸವರ್ೆಗಳ ಪ್ರಕಾರ, `ಸಂಯುಕ್ತ ಕನರ್ಾಟಕ'ದ ಸರಾಸರಿ ಓದುಗರ ಸಂಖ್ಯೆ ಸುಮಾರು 10 ಲಕ್ಷಕ್ಕೂ ಹೆಚ್ಚು. ಶನಿವಾರದ ಪುರವಣಿ `ಕಿಂದರಿ ಜೋಗಿ'ಗೆ ನಮ್ಮ ದೈನಂದಿನ ಪ್ರಸಾರಕ್ಕಿಂತಲೂ ಹೆಚ್ಚು ಪ್ರಸಾರವಿದೆ. ಹೀಗಾಗಿ ಅದು `ಟಿಂಕಲ್'ನಷ್ಟೇ, ಅಥವಾ ಬಹುಶಃ ಇನ್ನೂ ಹೆಚ್ಚು ಓದುಗರನ್ನು ತಲುಪುತ್ತಿದೆ. ಇದು ದೊಡ್ಡ ದಿನಪತ್ರಿಕೆಗಳಿಗೆ ಇರುವ ಅನುಕೂಲತೆ. ಮಕ್ಕಳ ಪತ್ರಿಕೆಗಳಿಗಿಂತಲೂ ನಮ್ಮ `ರೀಚ್' ಜಾಸ್ತಿ. ಅದನ್ನು `ಸಂಯುಕ್ತ ಕನರ್ಾಟಕ' ಸಮರ್ಥವಾದ, ಸಾರ್ಥಕವಾದ ರೀತಿಯಲ್ಲಿ ಬಳಸಿಕೊಳ್ಳುತ್ತಿದೆ.

*********

ಒಮ್ಮೊಮ್ಮೆ ನೈತಿಕವಾಗಿ, ಬೌದ್ಧಿಕವಾಗಿ ಬಹಳ ಉಪಯುಕ್ತವಾದ ಅನೇಕ ಮಕ್ಕಳ ಪತ್ರಿಕೆಗಳು ಪಡೆಯಬೇಕಿರುವಷ್ಟು ಪ್ರಸರಣವನ್ನು ಪಡೆಯುತ್ತಿಲ್ಲ. ಒಂದು ಉದಾಹರಣೆಯನ್ನು ನೋಡೊಣ. ಉಪಯುಕ್ತತೆಯ ದೃಷ್ಟಿಯಿಂದ ತುಂಬ ಮಹತ್ವದ್ದೆನಿಸಿದ್ದರೂ ಅಗತ್ಯವಿರುವಷ್ಟು ಪ್ರಸಾರ ಸಂಖ್ಯೆಯನ್ನು ಹೊಂದಿಲ್ಲದ ಮಕ್ಕಳ ಮಾಸಿಕ ಎಂದರೆ, `ಬಾಲ ವಿಜ್ಞಾನ'. ಕನರ್ಾಟಕ ರಾಜ್ಯ ವಿಜ್ಞಾನ ಪರಿಷತ್ತು ಅದನ್ನು 1977 ರಿಂದ ನಡೆಸಿಕೊಂಡು ಬರುತ್ತಿದೆ. ಕಡಿಮೆ ಬೆಲೆಯಲ್ಲಿ ಉತ್ತಮ ವೈಜ್ಞಾನಿಕ ವಾಚನಾ ಸಾಮಗ್ರಿ ಒದಗಿಸುವುದು ಅದರ ಉದ್ದೇಶ. ಅದರ ಬೆಲೆ 10-12 ರೂಪಾಯಿಗಳು ಇರಬಹುದು ಅಷ್ಟೇ.

ಒಳ್ಳೆಯ ಲೇಖನಗಳಿರುವ ಈ ನಿಯತಕಾಲಿಕದ ಪ್ರಸಾರ ಸಂಖ್ಯೆ ಅದರ ಗುಣಮಟ್ಟವನ್ನು ಆಧರಿಸಿಲ್ಲ. ಹಾಗೆಂದು ಅದರ ಪ್ರಸಾರ ಸಂಖ್ಯೆ ತೀರಾ ಕಡಿಮೆಯೂ ಅಲ್ಲ. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಒಂದೇ ಬಗೆಯ ಪ್ರತಿಕೆಗಳೇ ತುಂಬಿಕೊಂಡಾಗ ಓದುಗರು ಎಲ್ಲವನ್ನೂ ಕೊಳ್ಳಲಾರರು. ಹಾಗೆ ಎಲ್ಲವನ್ನೂ ಖರೀದಿಸುವ ಅಗತ್ಯವೂ ಇಲ್ಲ. ಆದರೆ `ಬಾಲ ವಿಜ್ಞಾನ' ಹಾಗಲ್ಲ. ಅದೊಂದು ವಿಶಿಷ್ಟ ನಿಯತಕಾಲಿಕ. ಅದರ ಪ್ರಸಾರ ಸಂಖ್ಯೆ ಸುಮಾರು 20,000 ದಷ್ಟು ಇರಬಹುದು ಎಂಬುದು ನನಗೆ ಸಿಕ್ಕಿರುವ ಮಾಹಿತಿ. ಈ ಕುರಿತು ಖಚಿತ ಅಂಕಿಅಂಶ ನನ್ನ ಬಳಿ ಇಲ್ಲ.

ಆದರೂ ಇದನ್ನು ತೀರಾ ಕಡಿಮೆ ಪ್ರಸಾರ ಸಂಖ್ಯೆ ಎಂದುಕೊಳ್ಳುವಂತಿಲ್ಲ. ಏಕೆಂದರೆ ಕನರ್ಾಟಕ ರಾಜ್ಯ ವಿಜ್ಞಾನ ಪರಿಷತ್ತು ವಾಣಿಜ್ಯ ಸಂಸ್ಥೆಯಲ್ಲ. ಹೀಗಾಗಿ ವೃತ್ತಿಪರ ಪ್ರಸಾರ ವಿಭಾಗ ಅದಕ್ಕೆ ಇಲ್ಲದಿರುವುದು ಸಹಜ. ಸುಮಾರು 20,000 ಶಾಲೆಗಳನ್ನು ಈ ಪತ್ರಿಕೆ ತಲುಪುತ್ತಿದೆ ಎಂದು ಕೇಳಿದ್ದೇನೆ. ರೀಟೇಲ್ ಮಾಕರ್ೆಟಿಂಗ್ಗೆ ಬದಲಾಗಿ ಶಾಲೆಗಳನ್ನು ತಲುಪಬೇಕೆನ್ನುವ ನೀತಿಯನ್ನು ಸಂಸ್ಥೆ ಹೊಂದಿರಬಹುದು. ಉತ್ತಮ ಬರಹಗಳ ಕಾರಣದಿಂದ ಈ ಪತ್ರಿಕೆ ಅದನ್ನು ಓದಿದವರ ಮನಸ್ಸಿನ ಮೇಲೆ ಉತ್ತಮ ಪರಿಣಾಮ ಉಂಟುಮಾಡುತ್ತಿದೆ.

**********

ಈಗ ಮಕ್ಕಳ ಪತ್ರಿಕೆಗಳಿಗೆ ಸಂಬಂದಿಸಿದಂತೆ ಹೆಚ್ಚಿನ ಮಂದಿಗೆ ಗೊತ್ತಿಲ್ಲದ ಮುಖ್ಯವಾದ ಸಂಗತಿಯತ್ತ ನಿಮ್ಮ ಗಮನ ಸೆಳೆಯಬಯಸುತ್ತೇನೆ. ಇಂದು ಬಹುತೇಕ ಪ್ರತಿಷ್ಠಿತ ಮಕ್ಕಳ ಪತ್ರಿಕೆಗಳನ್ನು ಅದರ ಪ್ರಕಾಶಕರು ತಾವೇ ತಯಾರಿಸುತ್ತಿಲ್ಲ. ಮಕ್ಕಳ ಪುರವಣಿಗಳನ್ನೂ ಅಷ್ಟೇ. ಔಟ್ಸೋಸರ್ಿಂಗ್ (ಹೊರಗುತ್ತಿಗೆ) ಈ ಕ್ಷೇತ್ರದಲ್ಲೂ ಕಾಲಿಟ್ಟಿದೆ. ಇದು ಒಂದು ರೀತಿಯಲ್ಲಿ ಅನುಕೂಲಕರವೂ ಹೌದು. ಹಾಗೆಯೇ ಅನಗತ್ಯ ಬೆಳವಣಿಗೆಯೂ ಹೌದು.

ಇಂದು ಮಕ್ಕಳ ಪತ್ರಿಕೆಗಳನ್ನು ತಯಾರಿಸಿಕೊಡುವ ವೃತ್ತಿಪರ ಸಂಸ್ಥೆಗಳಿವೆ. ಈ ಸಂಸ್ಥೆಗಳು ಪ್ರತ್ಯೇಕ ಸಿಬ್ಬಂದಿಯನ್ನು ಹೊಂದಿರುತ್ತವೆ. ಒಂದಿಷ್ಟು ಮಾಹಿತಿಯನ್ನು, ಕಥೆಗಳನ್ನು, ಕಾಟರ್ೂನುಗಳನ್ನು ಒಳಗೊಂಡ ಡೇಟಾಬ್ಯಾಂಕ್ ಅನ್ನು ಇಂತಹ ಸಂಸ್ಥೆಗಳು ತಯಾರಿಸಿ ಇಟ್ಟುಕೊಂಡಿರುತ್ತವೆ. ಅದೇ ಈ ಸಂಸ್ಥೆಗಳ ಆಸ್ತಿ. ಅದನ್ನೇ ಪುನರಾವತರ್ಿಸಿ, ಅಲ್ಪ ಸ್ವಲ್ಪ ಮಾಪರ್ಾಡು ಮಾಡಿ ಅವು ಪತ್ರಿಕೆಯ ಪುಟಗಳನ್ನು ತಯಾರಿಸುತ್ತವೆ. ಈ ಪುಟಗಳನ್ನು ನಾನಾ ಭಾಷೆಗಳಲ್ಲಿ ವಿವಿಧ ಪ್ರಕಾಶಕರಿಗೆ ಮಾರುತ್ತವೆ. ನೀವು ಹಣ ಕೊಟ್ಟರೆ ಸಾಕು. ನಿಮ್ಮ ಹೆಸರಿನಲ್ಲಿಯೂ ಪತ್ರಿಕೆ ತಯಾರಿಸಿಕೊಡುತ್ತವೆ!

ಇದರಿಂದ ನಿಮಗೆ ಉತ್ಪಾದನೆಯ ಕಷ್ಟವೇನೋ ತಪ್ಪುತ್ತದೆ. ಪ್ರತಿಭಾವಂತರನ್ನು ಕಲೆಹಾಕುವ ಕಷ್ಟ ತಪ್ಪುತ್ತದೆ. ಆದರೆ ಪತ್ರಿಕೆಯ ಯೋಜನೆಯಲ್ಲಿ ನಿಮ್ಮ ಪಾತ್ರ ಅಷ್ಟಾಗಿ ಇರುವುದಿಲ್ಲ. ಹೆಸರಿಗಷ್ಟೇ ನೀವು ಸಂಪಾದಕರು. ಪತ್ರಿಕೆ ತಯಾರಿಸಿದ ಅನುಭವವೇ ನಿಮಗಿರುವುದಿಲ್ಲ. ನಿಮ್ಮ ಓದುಗರು ಯಾರು? ಅವರ ಅಗತ್ಯಗಳೇನು ಎಂಬ ಸ್ಪಷ್ಟ ಕಲ್ಪನೆ ನಿಮ್ಮಲ್ಲಿ ಮೂಡುವುದಿಲ್ಲ.

ಈ ತರಹದ ಹೊರಗುತ್ತಿಗೆ ಸಂಸ್ಥೆಗಳು ನಿಮಗೆ ನೀಡಿದ `ಕಂಟೆಂಟ್' ಅನ್ನೇ ಇನ್ನೊಂದು ಪ್ರದೇಶದಲ್ಲಿ, ಅಥವಾ ನಿಮ್ಮ ಪ್ರದೇಶದಲ್ಲೇ ಬೇರೆ ಭಾಷೆಯಲ್ಲಿ, ಇತರ ಪ್ರಕಾಶಕರಿಗೂ ನೀಡುತ್ತವೆ! ಪುಟವಿನ್ಯಾಸ, ಲೇಖನ ಸಾಮಗ್ರಿ ಎಲ್ಲ ಒಂದೇ! ಒಂದೇ ರೀತಿಯ ಪುಟಗಳು ಬೇರೆ ಬೇರೆ ಪ್ರದೇಶಗಳಲ್ಲಿ, ಬೇರೆ ಬೇರೆ ಭಾಷೆಗಳಲ್ಲಿ, ವಿಭಿನ್ನ ಪತ್ರಿಕಾ ಶೀಷರ್ಿಕೆಗಳ ಅಡಿಯಲ್ಲಿ ರಾರಾಜಿಸುತ್ತಿರುತ್ತವೆ! ಇದರಿಂದ ಪತ್ರಿಕೆಗಳ ಗುಣಮಟ್ಟ ಹಾಳಾಗುತ್ತದೆ. ವೈವಿಧ್ಯತೆ ಹಾಳಾಗುತ್ತದೆ. ಇಂದು ನೀವು ವಿವಿಧ ಪತ್ರಿಕೆಗಳ ನಡುವೆ ಕಾಣುತ್ತಿರುವ ಏಕತಾನತೆಗೆ ಈ ರೀತಿಯ ವ್ಯಾಪಾರಿ ಆಯಾಮವೇ ಕಾರಣ. ಅನೇಕರು ಇಂದು ಹೆಸರಿಗೆ ಮಾತ್ರ ಮಕ್ಕಳ ಪತ್ರಿಕೆಯ ಸಂಪಾದಕರು. ಪತ್ರಿಕೆ ಬೇರೆಲ್ಲೋ ತಯಾರಾಗುತ್ತಿರುತ್ತದೆ!

ಅನೇಕ ಪ್ರತಿಷ್ಠಿತ ದಿನಪತ್ರಿಕೆಗಳೂ ಸಹ ತಮ್ಮ ಮಕ್ಕಳ ಪುರವಣಿಗಳನ್ನು ಹೀಗೇ ತಯಾರಿಸುತ್ತಿವೆ. ಅವುಗಳ ಹೆಸರುಗಳನ್ನು ಇಲ್ಲಿ ಹೇಳುವುದು ಬೇಡ. ಆದರೆ ಇದು ವಾಸ್ತವ ಸ್ಥಿತಿ. ಈ ಟ್ರೆಂಡಿಗೆ ನಮ್ಮ `ಕಿಂದರಿ ಜೋಗಿ' ಒಂದು ಅಪವಾದ ಎಂದು ಸಂತೋಷದಿಂದ ಹೇಳಬಯಸುತ್ತೇನೆ. ಅದು ಸಂಪೂರ್ಣವಾಗಿ ನಮ್ಮದೇ ಸಂಸ್ಥೆಯ ಸ್ವಂತ ತಯಾರಿಕೆ. ಅದರಲ್ಲಿರುವ ಒಂದೊಂದು ಚುಕ್ಕಿಗೂ ಒಂದೊಂದು ಗೆರೆಗೂ ಅದರ ಸಂಪಾದಕನಾಗಿ ನಾನೇ ಹೊಣೆಗಾರ. ಅಷ್ಟರ ಮಟ್ಟಿಗೆ ನಾವು ಸ್ವಾತಂತ್ರ್ಯ ಇಟ್ಟುಕೊಂಡಿದ್ದೇವೆ. ತನ್ಮೂಲಕ ಕನ್ನಡದ ಮಕ್ಕಳ ಒಳಿತಿಗಾಗಿ ಶ್ರಮಿಸುತ್ತಿದ್ದೇವೆ.

*********

`ಕಿಂದರಿ ಜೋಗಿ'ಗೆ `ಚಂದಮಾಮ'ದ ಗುಣವೂ ಇದೆ. `ಬಾಲ ವಿಜ್ಞಾನ'ದ ಗುಣವೂ ಇದೆ. `ಬಾಲ ವಿಜ್ಞಾನ'ಕ್ಕೂ `ಕಿಂದರಿ ಜೋಗಿ'ಗೂ ಎಷ್ಟೋ ಸಾಮ್ಯತೆಗಳಿವೆ. `ಕಿಂದರಿ ಜೋಗಿ'ಯೂ ಸಹ ಜ್ಞಾನಾಧಾರಿತ ಪತ್ರಿಕೆ, ಅಥವಾ ಪುರವಣಿ. ಅದೂ ಸಹ `ಬಾಲ ವಿಜ್ಞಾನ'ದಂತೆ ಸಾವಿರಾರು ಶಾಲೆಗಳನ್ನು ತಲುಪುತ್ತಿದೆ. ಆದರೆ ಇಲ್ಲಿ ಒಂದು ಪ್ರಮುಖ ವ್ಯತ್ಯಾಸವಿದೆ. ನಮ್ಮದು ಕನ್ನಡದ ಹಿರಿಯ ದೈನಿಕವಾದ್ದರಿಂದ ಸಹಜವಾಗಿ ನಮಗೆ ಉತ್ತಮ ಪ್ರಸಾರ ವಿಭಾಗದ ನೆರವಿದೆ. ವಿಭಿನ್ನ ಪ್ರಸಾರ ನೀತಿಗಳಿವೆ. ಹೀಗಾಗಿ ನಾವು ಶಾಲೆಗಳ ಲೈಬ್ರರಿಗಳನ್ನು ಮಾತ್ರ ತಲುಪುತ್ತಿಲ್ಲ. ಶಾಲಾ ಮುಖ್ಯಸ್ಥರಿಗೆ ಮಾತ್ರ `ಕಿಂದರಿ ಜೋಗಿ'ಯ ಪ್ರತಿಗಳು ಹೋಗುತ್ತಿಲ್ಲ. ಒಂದು ಶಾಲೆಗೆ `ಕಿಂದರಿ ಜೋಗಿ' ಹೋಯಿತು ಎಂದರೆ ಅಲ್ಲಿನ ಬಹುಪಾಲು ವಿದ್ಯಾಥರ್ಿಗಳ ಮನೆಗೆ ಶಾಲೆಯ ಮೂಲಕ ಸರಬರಾಜಾಯಿತು ಎಂದರ್ಥ.

ಒಂದೊಂದು ಶಾಲೆಗೂ ನಾವು 300-400, 1000-1500, ಹೀಗೆ ಪ್ರತಿಗಳನ್ನು ಕಳುಹಿಸುತ್ತಿದ್ದೇವೆ. `ಕಿಂದರಿ ಜೋಗಿ'ಯ ಪ್ರಭಾವ ಹೆಚ್ಚುತ್ತಿದೆ. ಅದರ ಶೈಕ್ಷಣಿಕ ಕೊಡುಗೆ ಸರ್ವತ್ರ ಮಾನ್ಯವಾಗಿ ರಾಜ್ಯಾದ್ಯಂತ ಒಂದು ಆಂದೋಲನದ ಸ್ವರೂಪ ಗಳಿಸಿಕೊಂಡಿದೆ. ಎಲ್ಲರ ಗಮನಕ್ಕೂ ತರುವ ಉದ್ದೇಶದಿಂದ ಮಾತ್ರ ಈ ಮಾತನ್ನು ಈ ಸಂದರ್ಭದಲ್ಲಿ ಹೇಳುತ್ತಿದ್ದೇನೆ.

*********

ಇನ್ನು, ಕನ್ನಡದಲ್ಲಿ ನಾನಾ ಪತ್ರಿಕೆಗಳು ಮಕ್ಕಳಿಗಾಗಿ ನಡೆಸಲ್ಪಡುತ್ತಿವೆ. ಕೇರಳದ ಮಂಗಳಂ ಪ್ರಕಾಶನ ಸಂಸ್ಥೆ ಮಲಯಾಳಂ ಹಾಗೂ ಕನ್ನಡದಲ್ಲಿ `ಬಾಲಮಂಗಳ' ಪಾಕ್ಷಿಕ ನಿಯತಕಾಲಿಕವನ್ನು ಹೊರತರುತ್ತಿದೆ.

`ಚಂದಮಾಮಾ', `ಬಾಲಮಿತ್ರ', `ಬೊಂಬೆಮನೆ', `ಪುಟಾಣಿ', `ಗಿಳಿವಿಂಡು', `ತುಂತುರು', ಬಾಲಮಂಗಳ', ಚಂಪಕ' - ಇವೆಲ್ಲ ಕನ್ನಡದ ಕೆಲವು ಪ್ರಸಿದ್ಧ ಮಕ್ಕಳ ಪತ್ರಿಕೆಗಳು. ಈ ಪಟ್ಟಿ ಅಪೂರ್ಣ. ಎಲ್ಲ ನಿಯತಕಾಲಿಕಗಳ ಹೆಸರುಗಳನ್ನೂ ದಾಖಲಿಸುವುದು ಕಷ್ಟ. ಕೆಲವನ್ನು ಮಾತ್ರ ಹೆಸರಿಸುತ್ತಿದ್ದೇನೆ. ವಾಸ್ತವವಾಗಿ ಈ ಪೈಕಿ ಅನೇಕ ಮಕ್ಕಳ ಪತ್ರಿಕೆಗಳು ಕೆಲಕಾಲ ನಡೆದು ಮುಚ್ಚಿಹೋಗಿವೆ. ವಾಣಿಜ್ಯಿಕ ಮತ್ತು ಇತರ ಅನೇಕ ಕಾರಣಗಳಿಗಾಗಿ ಎಷ್ಟೋ ಪತ್ರಿಕೆಗಳು ಮುಚ್ಚಿಹೋಗುವುದು ಸಹಜ. ಪಶ್ಚಿಮದಲ್ಲಿ ನೂರಾರು ವರ್ಷಗಳ ಇತಿಹಾಸವಿರುವ ಪ್ರತಿಷ್ಠಿತ ಪತ್ರಿಕೆಗಳೆಷ್ಟೋ ಈಗ  ಇತಿಹಾಸ ಸೇರಿವೆ. ಉಳಿದ ಎಷ್ಟೋ ಪತ್ರಿಕೆಗಳು ಬಾಗಿಲು ಹಾಕುವ ಹಂತದಲ್ಲಿವೆ. ಅಥವಾ ಮಾರಾಟವಾಗುತ್ತಿವೆ.

ಅದು ಮುಖ್ಯವಾದ ಸಂಗತಿ ಅಲ್ಲ. ಒಂದು ನಿಯತಕಾಲಿಕ ಎಷ್ಟು ಕಾಲ ನಡೆಯಿತು ಎಂಬುದಕ್ಕಿಂತಲೂ, ಅದರ ಉದ್ದೇಶ ಏನು? ಗುಣಮಟ್ಟ ಎಂಥದ್ದು? ಅದರ ಶೈಕ್ಷಣಿಕ ಹಾಗೂ ನೈತಿಕ ಪ್ರಭಾವ ಎಷ್ಟು ಎಂಬುದೇ ಹೆಚ್ಚು ಗಮನಾರ್ಹ. ಈ ಅಂಶಗಳೇ ಇತಿಹಾಸದಲ್ಲಿ ಅದರ ಸ್ಥಾನವನ್ನು ನಿರ್ಧರಿಸುತ್ತವೆ.

ಈಗ ಪಶ್ಚಿಮದ ಮಕ್ಕಳ ಪತ್ರಿಕೆಗಳಲ್ಲಿ ಬರೀ `ಮನೋರಂಜನೆ'ಗೇ ಹೆಚ್ಚು ಒತ್ತು ನೀಡಲಾಗುತ್ತಿದೆ. ವಿಶೇಷವಾಗಿ ಕಾಮಿಕ್ಸ್ಗಳು ಟಿವಿ ಪ್ರಭಾವಕ್ಕೆ ಒಳಗಾಗಿವೆ. ಹೊಸ ಕಾಮಿಕ್ ಪಾತ್ರಗಳ ವೇಷ-ಭೂಷಣಗಳು, ಸಂಭಾಷಣೆಗಳು ಮಕ್ಕಳಿಗೆ ತಕ್ಕ ಹಾಗಿಲ್ಲ.

ಭಾರತದ ಹಾಗೂ ಪಶ್ಚಿಮ ದೇಶಗಳ ಇಂಗ್ಲಿಷ್ ಪತ್ರಿಕೆಗಳನ್ನು ನೋಡಿದಾಗ `ಕಿಂದರಿ ಜೋಗಿ'ಯಂತಹ ಪುರವಣಿ, `ಬಾಲ ವಿಜ್ಞಾನ'ದಂತಹ, `ಚಂದಮಾಮಾ'ದಂತಹ ಪತ್ರಿಕೆಗಳು ನಮ್ಮ ಮಕ್ಕಳ ಆಪ್ತ ಗೆಳೆಯರಂತೆ, ನೆಚ್ಚಿನ ಶಿಕ್ಷಕರಂತೆ ಕಾರ್ಯವೆಸಗುತ್ತಿರುವುದು ಸಂತೋಷದ ವಿಷಯ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ